ಡಾ.ಗಿರೆಡ್ಡಿ ಗೋವಿಂದರಾಜ. ಕನ್ನಡದ ಶ್ರೇಷ್ಠ ವಿಮರ್ಶಕರು.ಇವರು ೧೯೩೯ ಸೆಪ್ಟಂಬರ ೨೩ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಯಲ್ಲಿ ಜನಿಸಿದರು.ನವ್ಯ ಸಾಹಿತ್ಯ ಯುಗದ ಪ್ರಥಮ ಪಂಕ್ತಿಗೆ ಸೇರುವ ವಿಮರ್ಶಕರು. == ಅಧ್ಯಯನ == ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣ ಅಬ್ಬಿಗೇರಿಯಲ್ಲಿಯೆ ಆಯಿತು. ಮಾಧ್ಯಮಿಕ ಶಿಕ್ಷಣವನ್ನು ರೋಣದಲ್ಲಿ ಪೂರ್ಣಗೊಳಿಸಿದ ಗಿರಡ್ಡಿಯವರು ೧೯೫೭ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೬೧ರಲ್ಲಿ ಧಾರವಾಡದಲ್ಲಿರುವ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದ ಗಿರಡ್ಡಿಯವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಎ. ಇಂಗ್ಲಿಷ್ ಪದವಿಯನ್ನು ೧೯೬೩ರಲ್ಲಿ ಹಾಗು. ಎಮ್.ಎ. ಕನ್ನಡ ಪದವಿಯನ್ನು ೧೯೬೯ರಲ್ಲಿ ಪಡೆದರು. ೧೯೭೦ರಲ್ಲಿ ಹೈದರಾಬಾದದಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟದಿಂದ ಡಿಪ್ಲೋಮಾ ಇನ್ ಇಂಗ್ಲಿಷ್ ಸ್ಟಡೀಜ್ ಪಡೆದರು. ೧೯೭೩ರಲ್ಲಿ ಇಂಗ್ಲಂಡ್ದಲ್ಲಿರುವ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಎಮ್.ಎ. (ಭಾಷಾಶಾಸ್ತ್ತ್ರ) ಪದವಿ ಪಡೆದರು. ೧೯೮೩ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಶೈಲಿಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದರು. == ಅಧ್ಯಾಪನ == ೧೯೬೩-೧೯೬೪ರವರೆಗೆ ಹಾವೇರಿ ಜಿಲ್ಲೆಯ ಹನುಮನಮಟ್ಟಿಯಲ್ಲಿಯ ಗ್ರಾಮೀಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರೆಂದು ವೃತ್ತಿಜೀವನ ಆರಂಭಿಸಿದ ಗಿರಡ್ಡಿಯವರು ೧೯೬೪ರಿಂದ ೧೯೭೦ರವರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಿಸಿದರು. ೧೯೭೦ರಿಂದ ೧೯೮೪ರವರೆಗೆ ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ೧೯೮೪ರಿಂದ ೧೯೯೮ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಹಾಗು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೧೯೯೯ ಮಾರ್ಚದಲ್ಲಿ ನಿವೃತ್ತರಾದರು. ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ (79) ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷರಾಗಿದ್ದ ಅವರು ೧೧-೫-೨೦೧೮ ಶುಕ್ರವಾರ ಸಂಜೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬಳಿ ಇರುವ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. == ಕೃತಿಗಳು == ಗಿರಡ್ಡಿ ಗೋವಿಂದರಾಜರು ಸೃಜನಶೀಲ ಸಾಹಿತ್ಯ ಹಾಗು ವಿಮರ್ಶೆ ಎರಡರಲ್ಲೂ ಖ್ಯಾತರಾಗಿದ್ದಾರೆ. ಇವರ ಕೃತಿಗಳು ಇಂತಿವೆ: === ಕಾವ್ಯ === ಶಾರದಾಲಹರಿ (೧೯೫೬) ರಸವಂತಿ (೧೯೬೧) ಮರ್ಲಿನ್ ಮನ್ರೋ ಮತ್ತು ಇತರ ಪದ್ಯಗಳು(೧೯೭೮) === ಕಥಾಸಂಕಲನ === ಆ ಮುಖಾ-ಈ ಮುಖಾ (೧೯೭೦) ಮಣ್ಣು (೧೯೭೬) ಹಂಗು ಮತ್ತು ಇತರ ಕತೆಗಳು (೧೯೭೮) ಒಂದು ಬೇವಿನಮರದ ಕಥೆ (೧೯೮೧) ಆಯ್ದ ಕಥೆಗಳು (೧೯೯೪) === ಸಾಹಿತ್ಯ ವಿಮರ್ಶೆ === ಸಣ್ಣ ಕತೆಯ ಹೊಸ ಒಲವುಗಳು (೧೯೬೫) ಜನಪದ ಕಾವ್ಯ (೧೯೭೧) ನವ್ಯ ವಿಮರ್ಶೆ (೧೯೭೫) ಕಾದಂಬರಿ: ವಸ್ತು ಮತ್ತು ತಂತ್ರ (೧೯೭೬) ಸಾಹಿತ್ಯ ಮತ್ತು ಪರಂಪರೆ (೧೯೮೧) ಇಂಗ್ಲಂಡಿನ ರಂಗಭೂಮಿ (೧೯೮೯) ಸಾತತ್ಯ (೧೯೯೨) ವಚನ ವಿನ್ಯಾಸ (೧೯೯೭) ಕನ್ನಡ ಕಾವ್ಯಪರಂಪರೆ ಮತ್ತು ಬೇಂದ್ರೆಯವರ ಕಾವ್ಯ (೨೦೦೧) === ಭಾಷಾಶಾಸ್ತ್ರ === ಕನ್ನಡ ಡೈಗ್ಲಾಸಿಯ (೧೯೯೮) === ಸಂಪಾದನೆ === ಸಣ್ಣ ಕತೆ (೧೯೮೧) ಕನ್ನಡ ಕಥಾಸಂಕಲನ (೧೯೮೩) ಆಧುನಿಕ ಕನ್ನಡ ಕಾವ್ಯ : ಉತ್ತರ ಕರ್ನಾಟಕದ ಕೊಡುಗೆ (೧೯೮೬) ಮರೆಯಬಾರದ ಹಳೆಯ ಕತೆಗಳು (೧೯೯೯) ಯುವಕಾವ್ಯ-೧೯೯೮ (೨೦೦೦) ಯುವಕಥೆ-೧೯೯೯ (೨೦೦೧) ಬಹುಮಾನಿತ ಕೃತಿಗಳು-೧೯೯೭ (೧೯೯೯) ಬಹುಮಾನಿತ ಕೃತಿಗಳು-೧೯೯೮ (೨೦೦೦) ಬಹುಮಾನಿತ ಕೃತಿಗಳು-೧೯೯೯ (೨೦೦೧) ಕೆ.ವಿ.ತಿರುಮಲೇಶರ ಸಾಹಿತ್ಯ (೨೦೦೦) ಕನ್ನಡ ನವೋದಯ ಕಾವ್ಯ : ಮಂಗಳೂರು ಕೇಂದ್ರ (೨೦೦೧) ಕನ್ನಡ ನವೋದಯ ಕಾವ್ಯ : ಮೈಸೂರು (೨೦೦೧) ಕುಂ.ವೀ. ಅವರ ಕಥಾಸಾಹಿತ್ಯ (೨೦೦೧) ಮಿರ್ಜಿ ಅಣ್ಣಾರಾಯರ ಸಾಹಿತ್ಯ (೨೦೦೧) ಓದುವ ದಾರಿಗಳು (೨೦೦೧) ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ಪಾರಿಭಾಷಿಕ ಮಾಲೆ’ಯ ೧೬ ಪುಸ್ತಕಗಳು === ಸಹಸಂಪಾದನೆ === ಸಂಕ್ರಮಣ ಕಾವ್ಯ (೧೯೬೪) ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು (೧೯೮೦) ದಶವಾರ್ಷಿಕ ವಿಮರ್ಶೆಗಳು (೧೯೮೬) ‘ಶತಮಾನದ ಸಂಕಲನಗಳು’ ಮಾಲೆಯ ೬ ಸಂಪುಟಗಳ ಪ್ರಧಾನ ಸಂಪಾದಕತ್ವ === ಸಮಗ್ರ === ಸಮಗ್ರ ಸೃಜನ (೨೦೦೧) ಸಮಗ್ರ ವಿಮರ್ಶೆ-೧ (೨೦೦೧) ಸಮಗ್ರ ವಿಮರ್ಶೆ-೨ (೨೦೦೧) === ಪತ್ರಿಕಾ ಸಂಪಾದನೆ === ‘ಸಂಕ್ರಮಣ’ ದ್ವೈಮಾಸಿಕಕ್ಕೆ ೧೯೬೪-೧೯೭೪ರ ಅವಧಿಯಲ್ಲಿ ಸಂಪಾದಕ ಮಂಡಲಿಯಲ್ಲಿ ಕಾರ್ಯ ನಿರ್ವಹಿಸಿದರು. == ಸದಸ್ಯತ್ವ == ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ (೧೯೭೮-೧೯೮೧) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ([[೧೯೮೧-೧೯೮೪, ೧೯೮೭-೧೯೯೧, ೧೯೯೫-೧೯೯೮) ಮೈಸೂರಿನ ‘ರಂಗಾಯಣ ರಂಗಸಮಾಜ’ದ ಆಡಳಿತ ಮಂಡಳಿಯ ಸದಸ್ಯ ಜ್ಞಾನಪೀಠ ಪ್ರಶಸ್ತಿ ಸಮಿತಿಯ ಕನ್ನಡ ಭಾಷಾ ಮಂಡಳಿಯ ಸದಸ್ಯ ಸಂಚಾಲಕ (೧೯೯೫ ಹಾಗು ೧೯೯೮) ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, (೧೯೯೮-೨೦೦೧) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ (೧೯೯೮-೨೦೦೧) ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಯ ಮತ್ತು ಕಾರ್ಯಕಾರಿಯ ಸದಸ್ಯ (೧೯೯೮-೨೦೦೧) ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಯ ಮತ್ತು ಕಾರ್ಯಕಾರಿಯ ಸದಸ್ಯ (೧೯೯೮-೨೦೦೧) ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ (೧೯೯೮-೨೦೦೧) ಪಂಪ ಪ್ರಶಸ್ತಿ ಆಯ್ಕೆ ಸಮಿತಿ (೧೯೯೮-೨೦೦೧) ಅತ್ತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ (೧೯೯೮-೨೦೦೧) ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ (೧೯೯೮-೨೦೦೧) ಕರ್ನಾಟಕ ವಿಶ್ವವಿದ್ಯಾಲಯ,ಮೈಸೂರು ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಇವುಗಳ ಅಧ್ಯಯನ ಮಂಡಳಿಗಳ ಸದಸ್ಯ (ವಿವಿಧ ಕಾಲಾವಧಿಗಳಲ್ಲಿ) ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯ (೨೦೦೧) == ನಾಟಕ, ಸಿನಿಮಾ == ಗಿರಡ್ಡಿಯವರು ಕಲಬುರ್ಗಿಯಲ್ಲಿದ್ದಾಗ ‘ರಂಗಮಾಧ್ಯಮ’ ಎನ್ನುವ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು. ಪುಟ್ಟಣ್ಣ ಕಣಗಾಲ ನಿರ್ದೇಶಿಸಿದ ಕಥಾಸಂಗಮ ಚಲನಚಿತ್ರದಲ್ಲಿ ಇವರ ಕತೆ ‘ಹಂಗು’ ಚಿತ್ರಣವಾಗಿದೆ. ‘ಹಂಗು’ ಕಥೆಯ ಹಿಂದಿ ರೂಪಾಂತರ ‘ಉಪಕಾರ’ ಎನ್ನುವ ಹೆಸರಿನಲ್ಲಿ ದಿಲ್ಲಿ ದೂರದರ್ಶನದ ಧಾರಾವಾಹಿ ಮಾಲಿಕೆಯಲ್ಲಿ ಪ್ರಸಾರವಾಗಿದೆ. ಹಲವಾರು ನಾಟಕಗಳಲ್ಲಿ ಅಭಿನಯ ಹಾಗು ನಿರ್ದೇಶನ ಮಾಡಿದ್ದಾರೆ. == ಗೌರವ-ಪ್ರಶಸ್ತಿ == ಭಾಷಾ ಶಾಸ್ತ್ರದಲ್ಲಿ ಎಮ್.ಎ. ಮಾಡಲು ಬ್ರಿಟಿಷ್ ಕೌನ್ಸಿಲ್ ಶಿಷ್ಯವೇತನ (೧೯೭೨-೭೩) ಓಡಿಸಾ ರಾಜ್ಯದ ಸಾಹಿತ್ಯಿಕ, ಸಾಂಸ್ಕೃತಿಕ ಅಧ್ಯಯನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಆಮಂತ್ರಣ, ನೆರವು (೧೯೭೫ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (೧೯೯೨) ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಷಿಪ್ (೧೯೯೩) “ನವ್ಯ ವಿಮರ್ಶೆ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಬಹುಮಾನ (೧೯೭೦) “ನವ್ಯ ವಿಮರ್ಶೆ” ಕೃತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಥಮ ಬಹುಮಾನ (೧೯೭೧) “ಕಾದಂಬರಿ: ವಸ್ತು ಮತ್ತು ತಂತ್ರ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಬಹುಮಾನ “ಸಾಹಿತ್ಯ ಮತ್ತು ಪರಂಪರೆ” ಕೃತಿಗೆ ಆರ್.ಎಸ್.ನಾಯಡು ಬಹುಮಾನ “ಸಾತತ್ಯ” ಕೃತಿಗೆ ವಿ.ಎಂ.ಇನಾಮದಾರ ಪ್ರಶಸ್ತಿ “ಸಾತತ್ಯ” ಕೃತಿಗೆ ಸ.ಸ.ಮಾಳವಾಡ ಪ್ರಶಸ್ತಿ “ವಚನ ವಿನ್ಯಾಸ” ಕೃತಿಗೆ ಇಳಕಲ್ಲ ಮಠದ ಪ್ರಶಸ್ತಿ ೨೦೦೧ರಲ್ಲಿ ಗಿರಡ್ಡಿ ಗೋವಿಂದರಾಜರಿಗೆ “ತಲಸ್ಪರ್ಶಿ" ಎನ್ನುವ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಯಿತು. ಈ ಕೃತಿಯನ್ನು ಮನು ಬಳಗಾರ ಹಾಗು ಜಿ.ಎಂ.ಹೆಗಡೆ ಸಂಪಾದಿಸಿದ್ದಾರೆ. == ಉಲ್ಲೇಖ ==